ನವದೆಹಲಿ:
2020ರಲ್ಲಿ ನಡೆದ ಭಾರತ–ಚೀನಾ ಸಂಘರ್ಷದ ಸಂದರ್ಭದಲ್ಲಿ ಪ್ರಧಾನಿ
ನರೇಂದ್ರ ಮೋದಿ ಅವರು ಜವಾಬ್ದಾರಿಯನ್ನು ಕೈಬಿಟ್ಟು ಸೇನಾ ಮುಖ್ಯಸ್ಥರ ಮೇಲೆ ಹೊರೆ ಹಾಕಿದರು ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ
ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿದ್ದಾರೆ.
ಸಂಸತ್ ಭವನದ ಆವರಣದಲ್ಲಿ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಮಾಜಿ ಸೇನಾ ಮುಖ್ಯಸ್ಥ
ಎಂ.ಎಂ. ನರವಾಣೆ ಅವರ ‘ಬಿಡುಗಡೆಯಾಗದ ಆತ್ಮಚರಿತ್ರೆ’ಯನ್ನು ಕೈಯಲ್ಲಿ ಹಿಡಿದು ಪ್ರದರ್ಶಿಸಿದರು.
ಕೇಂದ್ರ ಸರ್ಕಾರ ಮತ್ತು ಸ್ಪೀಕರ್ ಈ ಪುಸ್ತಕ ಅಸ್ತಿತ್ವದಲ್ಲೇ ಇಲ್ಲ ಎಂದು ಹೇಳುತ್ತಿದ್ದಾರೆ. ರಕ್ಷಣಾ ಸಚಿವ
ರಾಜನಾಥ್ ಸಿಂಗ್ ಕೂಡ ಈ ಪುಸ್ತಕ ಇಲ್ಲ ಎಂದು ಹೇಳಿದ್ದಾರೆ. ಆದರೆ ಈ ಆತ್ಮಚರಿತ್ರೆ ಅಸ್ತಿತ್ವದಲ್ಲಿದೆ ಎಂಬುದನ್ನು ಭಾರತದ ಯುವಕರು ನೋಡಬೇಕು ಎಂದು ರಾಹುಲ್ ಗಾಂಧಿ ಹೇಳಿದರು.
ಲಡಾಖ್ನಲ್ಲಿ ಏನಾಯಿತು ಎಂಬುದರ ಸಂಪೂರ್ಣ ವಿವರವನ್ನು ನರವಾಣೆ ಅವರು ತಮ್ಮ ಆತ್ಮಚರಿತ್ರೆಯಲ್ಲಿ ಬರೆದಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿ, ಕೇಂದ್ರ ಸರ್ಕಾರ ಬೇರೆ ರೀತಿಯಲ್ಲಿ ಹೇಳಿಕೊಂಡರೂ ಈ ಪುಸ್ತಕ ಅಸ್ತಿತ್ವದಲ್ಲಿದೆ ಎಂಬುದು ದೇಶದ ಜನರಿಗೆ ತಿಳಿಯಬೇಕು ಎಂದು ಒತ್ತಾಯಿಸಿದರು.
2020ರ ಗಡಿ ಸಂಘರ್ಷದ ಸಂದರ್ಭದಲ್ಲಿ ಸರ್ಕಾರದ ಪಾತ್ರ ಹಾಗೂ ನಿರ್ಧಾರಗಳ ಬಗ್ಗೆ ಸಾರ್ವಜನಿಕವಾಗಿ ಸ್ಪಷ್ಟನೆ ನೀಡಬೇಕು ಎಂದು ಅವರು ಆಗ್ರಹಿಸಿದರು.